ವೈದ್ಯಕೀಯ ಕಾಲೇಜು ತರಗತಿ ನಿರಾಕರಣೆ: ಸಿ.ಟಿ ರವಿ ನಿರ್ಲಕ್ಷ ಕಾರಣ
1 min read
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈ ವರ್ಷದಿಂದ ಮೆಡಿಕಲ್ ಕಾಲೇಜು ಶೈಕ್ಷಣಿಕವರ್ಷ ಆರಂಭಕ್ಕೆ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಅನುಮತಿ ನಿರಾಕರಿಸಿದ್ದು, ಇದಕ್ಕೆ ಶಾಸಕ ಸಿ.ಟಿ.ರವಿ ಮತ್ತು ಕೇಂದ್ರಸಚಿವೆ ಶೋಭಾಕರಂದ್ಲಾಜೆ ಅವರ ನಿರ್ಲಕ್ಷ್ಯವೇ ಪ್ರಮುಖ ಕಾರಣವೆಂದು ಜಿಲ್ಲಾ ಕಾಂಗ್ರೆಸ್ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈದ್ಯಕೀಯ ಕಾಲೇಜು ಆರಂಭವಿಷಯಕ್ಕೆ ಸಂಬಂಧಿಸಿದಂತೆ ಶಾಸಕರು ಮತ್ತು ಕೇಂದ್ರ ಸಚಿವರು ಸ್ವಹಿತಾಸಕ್ತಿಯನ್ನು ಬದಿಗಿಟ್ಟು ಜನರ ಹಿತಾಸಕ್ತಿಗೆ ಒತ್ತುಕೊಡಲು ಮುಂದಾಗಬೇಕಿದೆ ಎಂದು ತಿಳಿಸಿದರು.
ರಾಜ್ಯದ ಹಾವೇರಿ, ಯಾದಗಿರಿ, ಚಿಕ್ಕಬಳ್ಳಾಪುರ ಮತ್ತು ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಶೈಕ್ಷಣಿವರ್ಷ ಆರಂಭಕ್ಕೆ ಸಮರ್ಪಕ ಮೂಲಸೌಲಭ್ಯಗಳಾದ ಕಟ್ಟಡ, ಅಧಿಕಾರಿ ಮತ್ತು ಸಿಬ್ಬಂದಿಗಳ ಕೊರತೆ ಹಿನ್ನಲೆಯಲ್ಲಿ ಅನುಮತಿ ನಿರಾಕರಿಸಿದ್ದು, ಇದರಿಂದ 150 ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ದೂರಿದರು.
ರಾಜ್ಯ ಆರೋಗ್ಯ ಸಚಿವರು 2021-22ನೇ ಸಾಲಿನಿಂದ ವೈದ್ಯಕೀಯ ಕಾಲೇಜು ಶೈಕ್ಷಣಿಕ ವರ್ಷ ಆರಂಭವಾಗಲಿದೆ ಎಂದು ಜಿಲ್ಲೆಗೆ ಭೇಟಿನೀಡಿದ್ದಾಗ ಭರವಸೆ ನೀಡಿದ್ದರು. ಸಿ.ಟಿ.ರವಿ ಅವರ ಪಕ್ಷದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಈ ಕ್ಷೇತ್ರದ ಸಂಸದೆಶೋಭಾ ಕರಂದ್ಲಾಜೆ ಕೇಂದ್ರ ಸಚಿವೆಯಾಗಿದ್ದಾರೆ. ಹೀಗಿದ್ದರೂ ಮೆಡಿಕಲ್ ಕಾಲೇಜು ಶೈಕ್ಷಣಿಕ ವರ್ಷ ಆರಂಭಕ್ಕೆ ಹಿನ್ನಡೆಯಾಗಿರುವುದು ಜಿಲ್ಲೆಯ ಜನತೆಗೆ ನಿರಾಸೆಯನ್ನುಂಟುಮಾಡಿದೆ ಎಂದು ತಿಳಿಸಿದರು.
ಮಲೆನಾಡಿನ ಪರಿಸರದಲ್ಲಿ ಶಿಕ್ಷಣ ಪಡೆಯಬೇಕೆಂಬ ಆಸೆಇಟ್ಟುಕೊಂಡಿದ್ದ 150 ವಿದ್ಯಾರ್ಥಿಗಳಿಗೆ ಇದರಿಂದ ವಂಚಿತರಾಗಿದ್ದಾರೆ. ಈ ವರ್ಷವೇ ಶೈಕ್ಷಣಿಕ ಕಾರ್ಯಚಟುವಟಿಕೆ ಆರಂಭಕ್ಕೆ ಈ ಕ್ಷೇತ್ರದ ಶಾಸಕರು ಮತ್ತು ಕೇಂದ್ರ ಸಚಿವರ ನಿರ್ಲಕ್ಷ್ಯ, ನಿರಾಸಕ್ತಿ ಕಾರಣವೆಂದು ಆರೋಪಿಸಿದರು.
ಮಲೆನಾಡಿನ ಜನರ ಮೇಲೆ ಕಸ್ತೂರಿರಂಗನ್ ವರದಿ ತೂಗುಗತ್ತಿ ನೇತಾಡುತ್ತಿದೆ. ಅತಿವೃಷ್ಟಿಯಿಂದ ಬೆಳೆ, ಭೂಮಿ ಕಳೆದುಕೊಂಡ ರೈತರು ಬೀದಿಗೆ ಬಂದಿದ್ದಾರೆ. ಕೋವಿಡ್ ಮೂರನೇ ಅಲೆ ವ್ಯಾಪಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜನರಲ್ಲಿ ಧೈರ್ಯ, ವಿಶ್ವಾಸ ತುಂಬುವಲ್ಲಿ ಶಾಸಕ ಸಿ.ಟಿ.ರವಿ ವಿಫಲರಾಗಿದ್ದಾರೆಂದರು.
ಶಾಸಕ ಸಿ.ಟಿ.ರವಿ ಅವರಿಗೆ ಜನರ ಬದುಕು, ಕ್ಷೇತ್ರದ ಅಭಿವೃದ್ಧಿಗಿಂತ ಪಕ್ಷದ ಸಂಘಟನೆ ಮುಖ್ಯವಾಗಿದೆ. ಈ ಬಗ್ಗೆ ಧ್ವನಿ ಎತ್ತಿದರೇ, ಕಾಂಗ್ರೆಸ್ ನಾಯಕರನ್ನು ಟೀಕಿಸುವುದಷ್ಟೇ ಅವರ ಕೆಲಸವಾಗಿದೆ. ಮಾತನಾಡಲಾರಂಭಿಸಿದರೆ, ನಮ್ಮದು ಡಬಲ್ ಇಂಜಿನ್ ಸರ್ಕಾರ ಎಂದು ಬಡಾಯಿ ಕೊಚ್ಚುತ್ತಾರೆ. ಆದರೆ, ಇವರ ಬಡಲ್ ಇಂಜಿನ್ ಸರ್ಕಾರ ಎಲ್ಲಾ ಕ್ಷೇತ್ರದಲ್ಲೂ ವಿಫಲವಾಗಿದೆ ಎಂದು ಟೀಕಿಸಿದರು.
ಕೇಂದ್ರಸಚಿವೆ ಮತ್ತು ಈಕ್ಷೇತ್ರದ ಶಾಸಕರ ಸಿ.ಟಿ.ರವಿ ನಿರ್ಲಕ್ಷ್ಯತನ ಮತ್ತು ಹೊಂದಾಣಿಕೆ ಕೊರತೆಯಿಂದ ಜಿಲ್ಲೆಯ ಜನತೆ ಇಂದು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಿರ್ಲಕ್ಷ್ಯತನವನ್ನು ದೂರವಿಟ್ಟು ಜನರ ಶ್ರೇಯೋಭಿವೃದ್ಧಿಗೆ ಮುಂದಾಗಲಿ ಎಂದು ಒತ್ತಾಯಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g