ಆರೋಗ್ಯ ಕೇಂದ್ರವನ್ನ ಮೇಲ್ದರ್ಜೆಗೆ ಏರಿಸುವಂತೆ ನಡೆಸಿದ ಬಾಳೆಹೊನ್ನೂರು ಬಂದ್ ಯಶಸ್ವಿ
1 min read
ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸಬೇಕೆಂದು ಆಗ್ರಹಿಸಿ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಸರ್ವಪಕ್ಷಗಳು ಹಾಗೂ ಜನಸಾಮಾನ್ಯರು ಬಾಳೆಹೊನ್ನೂರು ಪಟ್ಟಣವನ್ನ ಬಂದ್ ಮಾಡಿ, ರಸ್ತೆ ತಡೆದು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಸದ್ಯಕ್ಕೆ ಸಾಮಾನ್ಯ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ತುರ್ತು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಜನಸಾಮಾನ್ಯರು ಪರದಾಡುವಂತಹಾ ಸ್ಥಿತಿ ನಿರ್ಮಾಣವಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಹಲವಾರು ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನಾನಿರತರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ನಾಲ್ಕೈದು ತಿಂಗಳ ಹಿಂದೆಯೂ ಸಮಯಕ್ಕೆ ಸರಿಯಾಗಿ ವೈದ್ಯರು ಸಿಗದೆ ಇದೇ ಆಸ್ಪತ್ರೆಯಲ್ಲಿ ಬಾಣಂತಿ ಕೂಡ ಸಾವನ್ನಪ್ಪಿದ್ದರು. ಬಾಳೆಹೊನ್ನೂರು ಸುತ್ತಮುತ್ತ ಕಾಫಿ ಹಾಗೂ ಅಡಿಕೆ ತೋಟಗಳೇ ಹೆಚ್ಚಿವೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರೇ ವಾಸವಿದ್ದಾರೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ದೂರದ ಊರುಗಳಿಗೆ ಹೋಗಲಾಗದೆ ಜನ ಪರದಾಡುತ್ತಿದ್ದಾರೆ.
ಸುಮಾರು ಲಕ್ಷದಷ್ಟು ಜನರಿಗೆ ಎಲ್ಲಾ ಕೆಲಸ-ಕಾರ್ಯಗಳಿಗೂ ಬಾಳೆಹೊನ್ನೂರು ಪಟ್ಟಣವೇ ಸಮೀಪ. ಆದರೆ, ಜನ ಆಸ್ಪತ್ರೆಗೆ ತೆರಳಬೇಕಂದ್ರೆ ದೂರದ ಊರುಗಳಿಗೆ ಹೋಗಬೇಕು. ಮಾರ್ಗ ಮಧ್ಯೆ ಸಾವನ್ನಪ್ಪಿದವರೂ ಇದ್ದಾರೆ. ಹಾಗಾಗಿ, ಸರ್ಕಾರ ಕೂಡಲೇ ಬಾಳೆಹೊನ್ನೂರು ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸಬೇಕೆಂದು ಆಗ್ರಹಿಸಿದ್ದಾರೆ. ಈ ಹಿಂದೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಡಿ.ಎಚ್.ಓ. ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಡಿ.ಎಚ್.ಓ. ಉಮೇಶ್ ನಿಮ್ಮ ಮನವಿಯನ್ನ ಸರ್ಕಾರದ ತಿಳಿಸುವುದಾಗಿ ಪ್ರತಿಭಟನಾನಿತರಿಗೆ ಭರವಸೆ ನೀಡಿದ್ದಾರೆ. ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸುವಂತೆ ಕರೆ ನೀಡಿದ್ದ ಬಂದ್ಗೆ ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. ಅಂಗಡಿ-ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಾಗಿಲುಮುಚ್ಚಿ ಪ್ರತಿಭಟನೆ ಬೆಂಬಲ ಸೂಚಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g