ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಕೈದಿ ಧನರಾಜ್ ಶಿವಮೊಗ್ಗದಲ್ಲಿ ಸೆರೆ
1 min read
ಚಿಕ್ಕಮಗಳೂರು: ಚಿಕಿತ್ಸೆಗೆಂದು ದಾಖಲಾಗಿದ್ದ ವೇಳೆ ಸರ್ಕಾರಿ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಕೈದಿಯನ್ನ ಜಿಲ್ಲೆಯ ಕಡೂರು ಪೊಲೀಸರು ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ಬಂದಿಸಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಧನರಾಜ್ ಎಂಬುವನನ್ನ ಕಡೂರು ಪೊಲೀಸರು ಗಾಂಜಾ ಪ್ರಕರಣದಲ್ಲಿ ಬಂದಿಸಿದ್ದರು. ವಿಚಾರಣಾಧೀನ ಕೈದಿಯಾಗಿದ್ದ ಧನರಾಜ್ ಹೊಟ್ಟೆನೋವು ಎಂಬ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಧನರಾಜ್ ಶೌಚಾಲಯಕ್ಕೆ ಹೋಗಬೇಕೆಂದು ಕೇಳಿಕೊಂಡಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಕಾವಲಿಗೆ ಇದ್ದ ಸಿಬ್ಬಂದಿ ಆತನ ಕೈಗಳಿಗೆ ಹಾಕಿದ್ದ ಕೋಳವನ್ನು ಬಿಚ್ಚಿ ಕಳುಹಿಸಿದ್ದರು. ಆರೋಪಿ ಧನರಾಜ್ ಶೌಚಗೃಹಕ್ಕೆ ಹೋಗುವಾಗ ಸಿಬ್ಬಂದಿಯನ್ನು ಅದೇ ಶೌಚಾಲಯದ ಒಳಕ್ಕೆ ದೂಡಿ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದನು.ತಪ್ಪಿಸಿಕೊಂಡ ಗಾಂಜಾ ಆರೋಪಿ ಧನರಾಜ್ ಗಾಗಿ ಜೈಲು ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ಆರಂಭಿಸಿದರು.
ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ಆರೋಪಿ ಧನರಾಜ್ ಇರುವುದನ್ನ ಖಚಿತಪಡಿಸಿಕೊಂಡ ಜೈಲು ಸಿಬ್ಬಂದಿ ಹಾಗೂ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ಬಳಿ ಯಾವುದೇ ಮೊಬೈಲ್ ಇಲ್ಲದಿದ್ದರೂ ಕೂಡ ಆರೋಪಿಯ ಜಾಡು ಹಿಡಿದು 48 ಗಂಟೆಯೊಳಗೆ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಎಸ್ಪಿ ಅಕ್ಷಯ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕಡೂರು ಪಿ.ಎಸ್.ಐ. ರಮ್ಯಾ, ಜೈಲು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g