ಹರಿಹರಪುರ ಶೀಮಠದಲ್ಲಿ ವಿಜೃಂಭಣೆಯ ಮಹಾರಥೋತ್ಸವ
1 min read
ಕೊಪ್ಪ: ತಾಲ್ಲೂಕಿನ ಹರಿಹರಪುರ ಶ್ರೀಮಠದಲ್ಲಿ ಮಹಾಕುಂಭಾಭಿಷೇಕ ಮಹೋತ್ಸವದ ಕೊನೆಯ ದಿನವಾದ ಭಾನುವಾರ ವಿಜೃಂಭಣೆಯ ಮಹಾರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೇರವೇರಿದವು.
ಕ್ಷೇತ್ರದ ಪ್ರಧಾನ ದೇವರಾದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ, ಶ್ರೀಶಾರದಾ ಪರಮೇಶ್ವರೀ ಮತ್ತು ಶ್ರೀಭಕ್ತಾಂಜನೇಯರ ಉತ್ಸವ ಮೂರ್ತಿಗಳನ್ನು ಸರ್ವಾಲಂಕೃತ ರಥದಲ್ಲಿ ಕುಳ್ಳಿರಿಸಲಾಯಿತು. ಶ್ರೀಮಠದ ಆವರಣದಿಂದ ಮುಖ್ಯ ರಸ್ತೆಯ ಮೂಲಕ ಜಿಮ್ಮಿಟ್ಟಿಗೆ ವರೆಗೆ ಭವ್ಯ ರಥೋತ್ಸವ ಸಾಗಿ ಮತ್ತೆ ಶ್ರೀಮಠಕ್ಕೆ ಆಗಮಿಸಿತು. ದಾರಿಯುದ್ದಕ್ಕೂ ಮನೆಗಳ ಎದುರು ನೀರು ಹಾಕಿ ರಂಗೋಲಿ ಬಿಡಿಸಿ ರಥವನ್ನು ಸ್ವಾಗತಿಸಲಾಯಿತು. ದೇವರಿಗೆ ಹೂ, ಹಣ್ಣುಕಾಯಿ ಸೇವೆ ಸಲ್ಲಿಸಿ ತಮ್ಮ ಶ್ರದ್ಧಾ ಭಕ್ತಿ ಮೆರೆದರು.
ರಥೋತ್ಸವದಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಸಹಸ್ರಾರು ಭಕ್ತಾಧಿಗಳು ಜಯಘೋಷಗಳನ್ನು ಹಾಕುತ್ತಾ ಕುಣಿಯುತ್ತಾ ಸಂಭ್ರಮಿಸಿ ತಮ್ಮ ಶ್ರದ್ಧಾ ಭಕ್ತಿಯನ್ನು ಪ್ರದರ್ಶಿಸಿದರು.
ಚೆಂಡೆ ವಾದನ, ವಾದ್ಯಮೇಳ, ಮಂಗಳವಾದ್ಯ, ಗೊಂಬೆಕುಣಿತ, ಕೀಲುಕುದುರೆ, ಸುಮಂಗಲಿಯರಿಂದ ಪೂರ್ಣಕುಂಭ, ಗಜರಾಜ ರಥೋತ್ಸವಕ್ಕೆ ಹೆಚ್ಚಿನ ಮೆರುಗು ನೀಡಿತ್ತು. ರಥೋತ್ಸವ ಹಾದು ಹೋದ ದಾರಿಯುದ್ದಕ್ಕೂ ಕೇಸರಿ ಬಂಟಿಂಗ್ಸ್, ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿತ್ತು. ದಾರಿಯುದ್ದಕ್ಕೂ ಕುಂಭಾಭಿಷೇಕಕ್ಕೆ ಶುಭಕೋರುವ ಬ್ಯಾನರ್ಗಳು ರಾರಾಜಿಸುತ್ತಿದ್ದವು. ಬೆಳಿಗ್ಗೆ 12-00ಕ್ಕೆ ಆರಂಭವಾದ ರಥೋತ್ಸವದ ಭವ್ಯ ಮೆರವಣಿಗೆ ಅಪರಾಹ್ನ 2-00ರವರೆಗೆ ನಡೆಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಶ್ರೀಮಠದ ಆಡಳಿತಾಧಿಕಾರಿ ಬಿ.ಎಸ್. ರವಿಶಂಕರ್, ಎಸ್.ಎನ್. ರಾಮಸ್ವಾಮಿ ಮುಂತಾದ ಗಣ್ಯರು ಶನಿವಾರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
* ಹಲವು ಗಣ್ಯರು ಭಾಗಿ
ಹರಿಹರಪುರ ಶ್ರೀಮಠದಲ್ಲಿ ನಡೆಯುತ್ತಿರುವ ಕುಂಭಾಭಿಷೇಕದ ಕೊನೆಯ ದಿನವಾದ ಭಾನುವಾರ ಕ್ಷೇತ್ರಕ್ಕೆ ಕೆಪಿಸಿಸಿ ರಾಜ್ಯಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಶಿವಮೊಗ್ಗ ಶಾಸಕ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ ದೇವರ ದರ್ಶನ ಪಡೆದು ಸ್ವಾಮೀಜಿಯ ಆಶೀರ್ವಾದ ಪಡೆದುಕೊಂಡು ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇಬ್ಬರು ಪ್ರತ್ಯೇಕವಾಗಿ ಶ್ರೀಮಠದ ಶ್ರೀಭಕ್ತಾಂಜನೇಯ, ಶ್ರೀಲಕ್ಷ್ಮೀನರಸಿಂಹಸ್ವಾಮಿ, ಶ್ರೀಶಾರದಾ ಪರಮೇಶ್ವರಿ ದೇವರ ದರ್ಶನ ಪಡೆದು, ಶ್ರೀಮಠದ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g