ಯುಗಾದಿಯಂದು ಸಾಮರಸ್ಯದೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ
1 min read
ಚಿಕ್ಕಮಗಳೂರು: ನಗರದ ಆಜಾದ್ವೃತ್ತದಲ್ಲಿ ಏ.2 ರಂದು ಪ್ರಗತಿಪರ ಚಿಂತನೆಯ ಸಮಾನ ಮನಸ್ಕರು ಯುಗಾದಿ ಹಬ್ಬದಲ್ಲಿ ಬೇವು,ಬೆಲ್ಲ ಹಂಚುವ ಮೂಲಕ ಸಾಮರಸ್ಯದೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಗತಿಪರ ಚಿಂತನೆಯ ಸಮಾನ ಮನಸ್ಕರು,ಸಮಾಜದಲ್ಲಿ ಸಾಮರಸ್ಯದ ಸಂದೇಶ ಸಾರಲು ಅಂದು ಸಂಜೆ 4 ಗಂಟೆಗೆ ಸರ್ವಧರ್ಮಿಯರು ಒಟ್ಟಿಗೆ ಸೇರಿ ಸೌಹರ್ದ ಯುಗಾದಿ ಆಚರಿಸುತ್ತಿರುವುದಾಗಿ ಹೇಳಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ಜಿಲ್ಲೆಯ ಪ್ರಗತಿಪರ ಚಿಂತನೆಯ ಸಮಾನ ಮನಸ್ಕರು ಒಂದೆಡೆ ಸೇರಿ ಬೇವು,ಬೆಲ್ಲ ಸವಿಯುವ ಮೂಲಕ ಸಾಮಾರಸ್ಯದೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸಿಕೊಂಡು ಬಂದಿರುವ ಭಾರತೀಯ ಸಮಾಜ ಬಹುತ್ವದ ಬುನಾದಿ ಮೇಲೆ ರೂಪುಗೊಂಡಿದೆ. ದೇಶದಲ್ಲಿ ಶಾಂತಿ,ಸೌಹಾರ್ದತೆ,ಸಮಾನತೆ ಭ್ರಾತೃತ್ವ ಕಾಪಾಡುವುದು ಪ್ರತಿಯೊಬ್ಬ ಭಾರತೀಯರ ಕೆಲಸವಾಗಿದೆ. ಆದರೆ ಬೆರಳೆಣಿಕೆಯಷ್ಟಿರುವ ಮತೀಯವಾದಿಗಳು ಸಮಾಜದಲ್ಲಿ ಕೋಮುದ್ವೇಷವನ್ನು ಹರಡಿ ಜನರ ಮನಸ್ಸನ್ನು ಒಡೆಯಲು ಹವಣಿಸುತ್ತಿದ್ದಾರೆಂದರು.ಶಿರವಸ್ತ್ರದ ಬಗ್ಗೆ ಕೆಂಗಣ್ಣುಬೀರಿದ ಕೋಮುವಾದಿಗಳು ಸಮಾಜದಲ್ಲಿ ದ್ವೇಷದ ಕಿಡಿಯನ್ನು ಹೊತ್ತಿಸಿದ್ದಾರೆ.ಪರಸ್ಪರ ಕೊಡು-ಕೊಳ್ಳುವಿಕೆಯಿಂದ ಬದುಕು ನಡೆಸುತ್ತಿರುವ ಹಿಂದು,ಮುಸಲ್ಮಾನರ ನಡುವೆ ಬೇಧವನ್ನುಂಟು ಮಾಡುವ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಧ್ವಂಸಗೊಳಿಸುತ್ತಿರುವುದು ಖಂಡನೀಯವೆಂದು ಹೇಳಿದರು.
ಕಾಂಗ್ರೆಸ್ ರಾಜ್ಯ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ಒಂದು ಸಮುದಾಯವನ್ನು ಸಂಕುಚಿತ ಮನೋಭಾವದಿಂದ ನೋಡಲಾಗುತ್ತಿದೆ. ವಿಚ್ಚಿದ್ರಕಾರಿ ಶಕ್ತಿಗಳನ್ನು ದೂರವಿಟ್ಟು ನಾವೆಲ್ಲ ಒಂದಾಗಬೇಕಾಗಿದೆ. ಕಾರ್ಮಿಕರು, ದಲಿತರು, ಬಡವರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರ ಬಗ್ಗೆ ಮಾತನಾಡದ ಕೆಲವು ಜನಪ್ರತಿನಿಧಿಗಳು ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಬೇಕೆಂದರು.
ಹಿಂದು, ಮುಸಲ್ಮಾನರ ನಡುವಿನ ವ್ಯಾಪಾರ,ವಹಿವಾಟುಗಳನ್ನು ನಿರ್ಬಂಧಿಸಲು ಬಹಿರಂಗ ಕರೆ ನೀಡುತ್ತಿರುವುದು ಸೌಹಾರ್ದ ಬದುಕಿಗೆ ಕೊಳ್ಳಿಇಡುವ ಸಂವಿಧಾನ ವಿರೋಧಿ ಕೃತ್ಯವಾಗಿದೆ. ಇದಕ್ಕೆ ರಾಜ್ಯದ ಕೆಲವು ಜನಪ್ರತಿನಿಧಿಗಳು ನೇರವಾಗಿ ಪ್ರಚೋದಿಸುತ್ತಿರುವುದು ದೇಶದ್ರೋಹದ ನಡೆಯಾಗಿದೆ ಎಂದು ನುಡಿದರು.
ಕಾಂಗ್ರೆಸ್ ಮುಖಂಡ ರವೀಶ್ಕ್ಯಾತನಬೀಡು ಮಾತನಾಡಿ, ಈ ಮಣ್ಣಿನಲ್ಲೆ ಸೌಹಾರ್ದತೆ ಹಾಸುಹೊಕ್ಕಾಗಿದೆ. ಆದರೆ ಕೆಲವರು ಕೋಮುಭಾವನೆ ಕೆರಳಿಸಿ, ಶಾಂತಿಕದಡಲು ಯತ್ನಿಸುತ್ತಿರುವ ಕಿಡಿಗೇಡಿಗಳನ್ನು ನಿಯಂತ್ರಿಸಬೇಕಾದ ಸರ್ಕಾರ ಕಂಡುಕಾಣದಂತೆ ಮೂಕಪ್ರೇಕ್ಷಕವಾಗಿ ವರ್ತಿಸುತ್ತಿರುವುದು ಜನತೆ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ನಂಬಿಕೆಯನ್ನೆ ಕಳೆದುಕೊಳ್ಳುವಂತಾಗಿದೆ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g