ಸಾಧನೆಗೆ, ಅಂತಃಶಕ್ತಿ ಮತ್ತು ಇಚ್ಛಾಶಕ್ತಿಯ ಛಲ ಬೇಕು: ಪ್ರಾಣಾ ಮಾತಾಜಿ
1 min readಚಿಕ್ಕಮಗಳೂರು: ಯಾವ ದಾರಿಯಲ್ಲಿ ನಾವು ಸಾಗಿದರೆ ನಮ್ಮ ಬದುಕು ಭವಿಷ್ಯ ಉಜ್ವಲವಾಗುತ್ತದೆ ಎಂಬುದನ್ನು ಇಂದಿನ ಮಕ್ಕಳು ಮೊದಲೇ ಅರಿತು ನಡೆಯಬೇಕು ಸಾಧನೆ ಮಾಡಬೇಕಾದರೆ ಅಂತ:ಶಕ್ತಿ ಮತ್ತು ಇಚ್ಛಾಶಕ್ತಿಯನ್ನು ಛಲವನ್ನು ಬೆಳೆಸಿಕೊಳ್ಳಬೇಕು ಎಂದು ಶಾರದಾ ಮಠದ ಅಧ್ಯಕ್ಷೆ ಶ್ರೀ ಪ್ರವ್ರಾಜಿಕಾ ಶುಭವ್ರತ ಪ್ರಾಣಾ ಮಾತಾಜಿ ಕಿವಿಮಾತು ಹೇಳಿದರು.
ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಅವರು, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಸಂದೇಶಗಳು ಮತ್ತು ಬದುಕು ಇಂದಿನ ಮಕ್ಕಳಿಗೆ ಆದರ್ಶವಾಗಬೇಕು ಅದರ ಬೆಳಕಿನಡಿಯಲ್ಲಿ ನಮ್ಮ ಮಕ್ಕಳು ಸಾಗಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿನ ತಾಯಂದಿರು ತಮ್ಮ ಮಕ್ಕಳನ್ನು ಯಾವುದೇ ರಾಜಕಾರಣಿಯ ಕೋಮು ಪ್ರಚೋದನೆಗೆ ಒಳಗಾಗದಂತೆ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಲೇಖಕ ಸಾಹಿತಿ ಐಎನ್ ಮುಕುಂದರಾಜ್ ಸಲಹೆ ಮಾಡಿದರು. ನಿಮ್ಮ ಮಕ್ಕಳ ಭವಿಷ್ಯ ಮುಖ್ಯ ಅವರ ಜೀವನ ಮುಖ್ಯ ಹಾಗಾಗಿ ಅವರು ಯಾವುದೇ ಪ್ರಚೋದನೆಗಳಿಗೆ ಯಾವುದೋ ಉಮೇದಿಗೆ ಒಳಗಾಗದಂತೆ ಅವರನ್ನು ಅತ್ಯಂತ ಜಾಗೃತೆಯಿಂದ ನೋಡಿಕೊಳ್ಳಬೇಕು ಮತ್ತು ಕನ್ನಡ ಪರಂಪರೆಗೆ ತಕ್ಕ ಹಾಗೆ ಅವರನ್ನು ಬೆಳೆಸಬೇಕು ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು.
ರಾಷ್ಟ್ರಕವಿ ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿಯವರು ನಿಧನರಾದ ನಂತರ ಅವರು ಬದುಕಿದ ರೀತಿಯಲ್ಲಿ ಬರೆದ ರೀತಿಯಲ್ಲಿ ಯೋಚಿಸಿದ ರೀತಿಯಲ್ಲಿ ಇರುವಂತಹ ಕವಿಗಳು ಅವರ ಮಟ್ಟದ ಸಾಹಿತಿಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿಲ್ಲ ಎಂದು ವಿಷಾದಿಸಿದರು. ಯಾವ ನೆಲದಲ್ಲಿ ಅಲ್ಲಿನ ಜನ ಜಾತ್ಯಾತೀತರಾಗಿರುತ್ತಾರೋ ಯಾವ ನೆಲದಲ್ಲಿ ಸೌಹಾರ್ದತೆಯ ಸಂಬಂಧವಿರುತ್ತದೋ ಯಾವ ನೆಲದಲ್ಲಿ ಮಾನವೀಯತೆ ಇರುತ್ತದೆಯೋ ಅಲ್ಲಿ ಮಾತ್ರ ಕವಿಗಳು ಹುಟ್ಟಲು ಸಾಧ್ಯವಾಗುತ್ತದೆ ಎಲ್ಲಿ ಕೋಮುವಾದ ಜಾತಿವಾದ ಇರುತ್ತದೆಯೋ ಅಲ್ಲಿ ಕವಿತೆ ಸತ್ತು ಹೋಗುತ್ತದೆ ಎಂದು ಎಚ್ಚರಿಸಿದರು.
ಬೇರೆಯವರ ಧರ್ಮವನ್ನು ನಾವು ಸೈರಣೆ ಮಾಡಿಕೊಂಡಾಗ ಮಾತ್ರ ಅಲ್ಲೊಂದು ಸೃಜನಶೀಲ ಮಾನವೀಯ ಜಗತ್ತು ನಿರ್ಮಾಣವಾಗುತ್ತದೆ ಮಾನವೀಯ ಮೌಲ್ಯಗಳು ಕಳೆದು ಹೋದ ಜಾಗದಲ್ಲಿ ಅಲ್ಲಿನ ತರುಣ ತರುಣಿಯರ ಸೃಜನಶೀಲ ಪ್ರತಿಭೆ ಬತ್ತಿ ಹೋಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುವೆಂಪು ವಿದ್ಯಾನಿಕೇತನದ ಕಾರ್ಯದರ್ಶಿ ಕೆಸಿ ಶಂಕರ್ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ನಮ್ಮ ಸಂಸ್ಕೃತಿ ಸಂಸ್ಕಾರವನ್ನೂ ಬೆಳೆಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ಶಾಲೆಯ ಕಾರ್ಯದರ್ಶಿ ಕೆಸಿ ಶಂಕರ್ ಟ್ರಸ್ಟಿ ಅರ್ಚನಾ ಶಂಕರ್ ಹೊನ್ನಾಂಬಿಕೆ ಜಗದೀಶ್ ಪ್ರಾಂಶುಪಾಲ ರಾಘವೇಂದ್ರ ಶೆಮ್ಮಿ ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g