ತಂಬಾಕು ಸೇವನೆ ದುಶ್ಚಟಕ್ಕೆ ಯುವಪೀಳಿಗೆ ಬಲಿಯಾಗದಿರಿ
1 min read
ಚಿಕ್ಕಮಗಳೂರು: ತಂಬಾಕು ಉತ್ಪನ್ನಗಳ ಸೇವನೆಯ ದುಶ್ಚಟಕ್ಕೆ ಬಲಿಯಾಗದಂತೆ ಯುವಜನತೆಗೆ ಜಾಗೃತಿ ಮೂಡಿಸಬೇಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮ ಎ.ಎಸ್ ತಿಳಿಸಿದರು.ಜಿಲ್ಲಾಡಳಿತ, ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶದಲ್ಲಿ ತಂಬಾಕು ಉತ್ಪನ್ನಗಳಗಳ ಬಳಕೆ ಹಾನಿ, ಸೇವನೆ ಮತ್ತು ಮಾರಾಟ ನಿಷೇಧ ಕುರಿತು ತಾಲ್ಲೂಕು ಕಛೇರಿಯಿಂದ ಜಿಲ್ಲಾಸ್ಪತ್ರೆವರೆಗೂ ನಡೆದ ಜಾಥಾ ಹಾಗೂ ಗುಲಾಬಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಯುವಪೀಳಿಗೆ ದೇಶದ ಸಂಪತ್ತು. ಬಹುತೇಕ ಯುವಜನತೆ ತಂಬಾಕು ಸೇವನೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಅವರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಜಾಗೃತಿ ಮೂಡಿಸುವಂತೆ ತಿಳಿಸಿದರು.
ತಂಬಾಕು ಸೇವನೆಯು ಮಾರಣಾಂತಿಕ ರೋಗಕ್ಕೆ ಕಾರಣವಾಗುತ್ತಿದೆ. ಆ ನಿಟ್ಟಿನಲ್ಲಿ ತಂಬಾಕು ಸೇವಿಸುವವರು ಮತ್ತು ಮಾರಾಟಗಾರರಿಗೆ ಗುಲಾಬಿ ನೀಡುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್ ಮಾತನಾಡಿ ತಂಬಾಕು ಸೇವನೆಯಿಂದಾಗಿ ದೇಹದ ಅಂಗಾಂಗಗಳ ಮೇಲೆ ಪರಿಣಾಮ ಬೀರಿ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸ್ರ್ ಹರಡಿ ಮಾರಾಂತಿಕವಾಗಿ ಸಾವು ಸಂಭವಿಸಬಹುದು ಎಂದು ಎಚ್ಚರಿಸಿದರು.
ತಂಬಾಕು ತ್ಯಜಿಸಲು ಬದ್ದವಾಗಿ ಎಂಬುದು ಈ ವರ್ಷದ ಘೋಷಣೆಯಾಗಿದ್ದು, ಸಮಾಜದಲ್ಲಿ ತಂಬಾಕು ಸೇವಿಸುವವರಿಗೆ ಅದರ ದುಷ್ಪರಿಣಾಮಗಳ ಕುರಿತು ಸಾರ್ವಜನಿಕ ಅರಿವು ಮೂಡಿಸಲಾಗುತ್ತಿದೆ. ಗುಲಾಬಿ ಹೂ ನೀಡುವ ಮೂಲಕ ತಂಬಾಕು ಮಾರಾಟಗಾರರು, ಹಾಗೂ ಸೇವಿಸುವವರಿಗೆ ತಿಳುವಳಿಕೆ ಮೂಡಿಸಲಾಗುತ್ತಿದೆ ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ತಂಬಾಕು ಸೇವನೆ ಹಾನಿ ಕುರಿತು ಆರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಮಂಜುನಾಥ್ ಮಾತನಾಡಿ ಪ್ರಪಂಚದಲ್ಲಿ ಸಾವನ್ನಪ್ಪುವ 60 ಲಕ್ಷ ಸಂಖ್ಯೆಯಲ್ಲಿ ಪ್ರತಿಶತ 10 ಲಕ್ಷ ಮಂದಿ ತಂಬಾಕು ಸೇವನೆ ಕಾರಣದಿಂದಾಗಿ ಸಾವನ್ನಪ್ಪುತ್ತಿದ್ದಾರೆ.ತಂಬಾಕು ಸೇವೆನೆ ಕ್ಯಾನ್ಸರ್ಗೆ ಕಾರಣವಾಗುತ್ತಿರುವುದು ಗೊತ್ತಿದ್ದರೂ ಯುವ ಜನತೆ ಇದರ ಹಿಂದೆ ಬಿದ್ದು ತಮ್ಮ ಆರೋಗ್ಯ ಹಾಗೂ ಹಣವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಸರ್ಕಾರದ ಆದೇಶವಿದ್ದರೂ ಕೆಲವೆಡೆ ಯಾವುದೇ ಭಯವಿಲ್ಲದೆ ಎಲ್ಲೆಂದರಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.
ತಹಸೀಲ್ದಾರ್ ಡಾ. ಕಾಂತರಾಜ್ ಮಾತನಾಡಿ ತಂಬಾಕು ಮಾರಕವಾದ ವಸ್ತವಾಗಿದ್ದು ಅದರ ದುಷ್ಪರಿಣಾಮಗಳ ಕುರಿತು ಜನತೆಗೆ ಅರಿವು ಮೂಡಿಸುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕು. ತಂಬಾಕು ಸೇವನೆ ಹಲವು ಮಾರಣಾಂತಿಕ ರೋಗಗಳಿಗೆ ಕಾರಣವಾಗಲಿದ್ದು ತ್ಯಜಿಸುವಂತೆ ಸಲಹೆ ನೀಡಿದರು. 18ರ ಒಳಗಿನ ಮಕ್ಕಳಿಗೆ ತಂಬಾಕು ನೀಡುವುದು ಕಾನೂನು ಬಾಹಿರ ಅಲ್ಲದೇ ಶಾಲಾ ಸುತ್ತಮುತ್ತಲ ನೂರು ಮೀಟರ್ ಒಳಗಡೆ ಮಾರಾಟ ಮಾಡದಂತೆ ಸ್ಪಷ್ಟ ಆದೇಶವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ದಿನೇಶ್, ಸಮಾಜ ಕಾರ್ಯಕರ್ತ, ರಾಘವೇಂದ್ರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಲಿತಾ ವೈ.ಎಂ., ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ, ಹಾಗೂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g