ಮಳೆ ಆರ್ಭಟ ಮುಂಜಾಗ್ರತಾ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
1 min readಚಿಕ್ಕಮಗಳೂರು: ಮೇ. 23: ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಸೂಚಿಸಿದರು.ತಹಸೀಲ್ದಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕೇಸ್ವಾನ್ನಲ್ಲಿ ವೀಡಿಯೊ ಸಂವಾದದ ಮೂಲಕ ಅವರು ಮಾತನಾಡಿದರು.ಈಗಾಗಲೇ ಮೇ. 21 ರಂದು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಭಾರಿ ಮಳೆಯಾಗಿದ್ದು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮಾನವ ಹಾನಿ, ಬೆಳೆ ಹಾನಿ ಹಾಗೂ ಪಶುಗಳ ಹಾನಿ ಬಗ್ಗೆ ಕೂಡಲೇ ವರದಿ ನೀಡಬೇಕು ಎಂದು ಹೇಳಿದ ಅವರು ಕೂಡಲೇ ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದರು.ಕಡೂರು ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, 14 ಮನೆಗಳಿಗೆ ಹಾನಿಯಾಗಿದೆಯಲ್ಲದೇ, ಮೂರು ಎಕ್ಟೇರ್ನಲ್ಲಿ ತೆಂಗು, 2.5 ಎಕ್ಟೇರ್ನಲ್ಲಿ ಬಾಳೆ ನಾಶವಾಗಿದೆ. ಬೀರೂರು ವಿಭಾಗದಲ್ಲಿ 10.9 ಎಕ್ಟೇರ್ ಪ್ರದೇಶದಲ್ಲಿ ತರಕಾರಿ ಬೆಳೆ ನಾಶವಾಗಿದೆ. ಇವುಗಳಿಗೆ ಪರಿಹಾರ ನೀಡುವ ಸಂಬಂಧ ಕ್ರಮ ವಹಿಸಬೇಕು ಎಂದು ಹೇಳಿದರು. ಕಡೂರು ತಹಸೀಲ್ದಾರ್ ಮಾಹಿತಿ ನೀಡಿ ಹಾನಿಯಾಗಿರುವ 14 ಮನೆಗಳು ತೋಟದಲ್ಲಿ ನಿರ್ಮಿಸಿರುವ ಮನೆಗಳಾಗಿದ್ದು, ಈ ಮನೆಗಳಿಗೆ ತಹಡಿನ ಶೀಟ್ಗಳನ್ನು ಹಾಕಲಾಗಿದೆ. ಇವು ಗಾಳಿಯಲ್ಲಿ ಹಾರಿ ಹೋಗಿದ್ದು, ಮನೆಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.ಮಳೆ ಹೆಚ್ಚಾಗುತ್ತಿರುವುದರಿಂದ ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರುಗಳು ಹಾಗೂ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಳೆಯಿಂದಾಗುವ ಹಾನಿಯ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ನಡೆಸಬೇಕು. ಗಂಜಿ ಕೇಂದ್ರಗಳನ್ನು ಸುಸ್ಥಿತಿಯಲ್ಲಿಡುವಂತೆ ಸೂಚಿಸಿದ ಅವರು 24 ಗಂಟೆಯು ಕಂಟ್ರೋಲ್ ರೂಂ ತೆರೆದಿದ್ದು ದೂರವಾಣಿ ಕರೆಗಳನ್ನು ಸ್ವೀಕರಿಸಬೇಕು, ಎಲ್ಲಾ ಆರೋಗ್ಯ ಕೇಂದ್ರಗಳಲ್ಲೂ ಹಾವು ಕಡಿತಕ್ಕೆ ಲಸಿಕೆ ಸ್ಟಾಕ್ ಇರಬೇಕು, ಸೊಳ್ಳೆಗಳ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳಲ್ಲಿ ಫಾಗಿಂಗ್ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮೂಡಿಗೆರೆಯಲ್ಲಿ ಮೇ. 21 ರಂದು ಬಿರುಗಾಳಿ ಮತ್ತು ಮಳೆಯಿಂದ ಹೋಂ ಸ್ಟೇ ಮಾಲೀಕ ವೇಣುಗೋಪಾಲ್ ಹೋಂ ಸ್ಟೇಗೆ ಹೋಗುವಾಗ ಮೃತ ಪಟ್ಟಿದ್ದರು. ಮೃತರ ಕುಟುಂಬಕ್ಕೆ ಪರಿಹಾರ ನೀಡಿರುವ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಮೃತರ ಕುಟುಂಬದವರು ಇನ್ನೂ ಅವರ ಬ್ಯಾಂಕ್ ಖಾತೆ ಸೇರಿದಂತೆ ದಾಖಲಾತಿಗಳನ್ನು ನೀಡುವಂತೆ ತಿಳಿಸಲಾಗಿದೆ. ಮಾಹಿತಿ ನೀಡಿದ ತಕ್ಷಣ ಅವರ ಖಾತೆಗೆ ಪರಿಹಾರದ ಹಣ ನೀಡಲಾಗುವುದೆಂದು ಚಿಕ್ಕಮಗಳೂರು ವಿಭಾಗದ ಉಪವಿಭಾಗಾಧಿಕಾರಿ ರಾಜೇಶ್ ಮಾಹಿತಿ ನೀಡಿದರು. ಸಭೆಯ ನಂತರ ಜಿಲ್ಲಾಧಿಕಾರಿಗಳು ಮೂಡಿಗೆರೆಯಲ್ಲಿರುವ ಮೃತರ ಕುಟುಂಬಕ್ಕೆ ಭೇಟಿ ನೀಡಿ ಸರ್ಕಾರದಿಂದ 5 ಲಕ್ಷ ಮಂಜೂರಾಗಿದ್ದು, ಪರಿಹಾರ ಪತ್ರವನ್ನು ಮೃತರ ಪತ್ನಿ ಕೆ.ಜಿ. ರಾಧಾ ಅವರಿಗೆ ನೀಡಿದರು(ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ. ಪ್ರಭು, ಉಪವಿಭಾಗಾಧಿಕಾರಿ ರಾಜೇಶ್ ಇದ್ದರು).
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g