ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಬೇಕು – ಕಲ್ಮುರಡಪ್ಪ
1 min readಚಿಕ್ಕಮಗಳೂರು : ಕೆಡಿಪಿ ಸಭೆಯಲ್ಲಿ ಆಗಿರುವ ಶಿಷ್ಟಾಚಾರದ ಉಲ್ಲಂಘನೆ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಧರಣಿ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ ಎಚ್ಚರಿಕೆಯನ್ನು ನೀಡಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ಜಿಲ್ಲಾ ಪಂಚಾಯ್ತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಕೆಡಿಪಿ ಸಭೆಯಲ್ಲಿ ಜಿಲ್ಲೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಶಾಸಕರುಗಳು ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಸಮ್ಮಖದಲ್ಲಿಯೇ ಶಿಷ್ಟಾಚಾರದ ಉಲ್ಲಂಘನೆ ಮಾಡಿ, ಸಭೆಯ ವೇದಿಕೆ ಅಲಂಕರಿಸಿದ್ದಾರೆ. ಶಿಷ್ಟಾಚಾರದ ಕನಿಷ್ಟ ಮಾಹಿತಿಯೇ ಇಲ್ಲದ ಶಾಸಕರಗಳ ಜೊತೆಯಲ್ಲಿ ನೂತನ ಜಿಲ್ಲಾಧಿಕಾರಿ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದು, ನಾಚಿಕೆ ಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.ಹಿರಿಯರು, ಅನುಭವಿಗಳು, ಶಾಸಕಾಂಗ ವ್ಯವಸ್ಥೆಯ ಬಗ್ಗೆ ಅರಿತಿರುವ ಉಸ್ತುವಾರಿ ಸಚಿವರಾದ ಜಾರ್ಜ್ ಅವರೂ ಕೂಡ ಶಿಷ್ಟಾಚಾರದ ಬಗ್ಗೆ ನೂತನ ಶಾಸಕರಿಗೆ ಮಾಹಿತಿ ನೀಡದಿರುವುದು ದುರಾದೃಷ್ಟ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಇತ್ತೀಚಿಗೆ ನೂತನ ಶಾಸಕರುಗಳಿಗಾಗಿ ನಡೆಸಿದ ತರಬೇತಿ ಕಾರ್ಯಗಾರದಲ್ಲಿ ಶಿಷ್ಟಾಚಾರದ ಉಲ್ಲಂಘನೆಯ ಪಾಠ ಮಾಡಿದ್ದಾರೆಯೇ? ಎಂಬ ಪ್ರಶ್ನೆ ಪ್ರತಿಯೊಬ್ಬ ಜನಸಾಮಾನ್ಯರಲ್ಲೂ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.ಆಡಳಿತ ವ್ಯವಸ್ಥೆಯಲ್ಲಿ ಸಭೆ ನಡೆಸುವಾಗ ಯಾರಿಗೆ ಯಾವ ಸ್ಥಾನ ಎಂಬುದರ ಬಗ್ಗೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡದಿರುವುದನ್ನು ನೋಡಿದರೆ ಭಾಗಶಃ ಅವರು ಕಾಂಗ್ರೆಸ್ ಏಜೆಂಟರಂತೆ ಆಡಳಿತವನ್ನುಮೋನೊಪೋಲಿ ಮಾಡಲು ಹೊರಟಿರುವುದು ಹಾಸ್ಯಸ್ಪದ ಎಂದು ಕುಟುಕಿದರು.ರಾಜ್ಯದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು ಒಂದೂವರೆ ತಿಂಗಳಲ್ಲೇ ಜಿಲ್ಲೆಯಲ್ಲಿ ಶಿಷ್ಟಾಚಾರದ ಉಲ್ಲಂಘನೆ ಮಾಡಿದ್ದಾರೆ. ಶಾಸಕಾಂಗ ಮತ್ತು ಕಾರ್ಯಾಂಗದ ವ್ಯವಸ್ಥೆ ಬಗ್ಗೆ ತಿಳುವಳಿಕೆ ಇಲ್ಲದ ಜಿಲ್ಲೆಯ ಕಾಂಗ್ರೆಸ್ನ ಶಾಸಕರುಗಳು ಮುಂದಿನ ದಿನಗಳಲ್ಲಿ ಯಾವ ಯಾವ ರೀತಿಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಟೀಕಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g