ವಿವಿಧ ಬೇಡಿಕೆಗೆ ಆಗ್ರಹಿಸಿ 102 ಹಳ್ಳಿಗಳಲ್ಲಿ ಬೈಕ್ ಜಾಥ
1 min read
ಚಿಕ್ಕಮಗಳೂರು: ನಿವೇಶನ ಹಾಗೂ ಭೂಮಿ ಹಕ್ಕಿಗಾಗಿ ಆಗ್ರಹಿಸಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಾ. 24 ಮತ್ತು 25 ರಂದು ಮಲೆನಾಡು ಭಾಗದ 102 ಹಳ್ಳಿಗಳಲ್ಲಿ ಬೈಕ್ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ಜನಶಕ್ತಿ ವೇದಿಕೆ ರಾಜ್ಯ ಕಾರ್ಯದರ್ಶಿ ಕೆ.ಎಲ್ ಅಶೋಕ್ ತಿಳಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾ. 24 ಮತ್ತು 25 ರಂದು ಜಿಲ್ಲೆಯ ಶೃಂಗೇರಿ ಪಟ್ಟಣದಿಂದ ಆರಂಭಗೊಂಡು ಎನ್.ಆರ್ ಪುರ, ಕೊಪ್ಪ, ಮೂಡಿಗೆರೆ, ಕಳಸ ಹಾಗೂ ಚಿಕ್ಕಮಗಳೂರು ತಾಲೂಕಿನ 102 ಹಳ್ಳಿಗಳಿಗೆ ಜನಜಾಗೃತಿ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಮೂಲಕ ಬೈಕ್ ಜಾಥಾ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಸಭೆ ನಡೆಸಿ ಬಳಿಕ ಮಾ,28 ರಂದು ಕೊಪ್ಪ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಹೋರಾಟದ ಮೂಲಕ ಸರ್ಕಾರಕ್ಕೆ ಜನವಸತಿ ಪ್ರದೇಶ ಸೇರಿದಂತೆ ಬಡವರು, ರೈತರು, ಕೃಷಿ ಮಾಡಿಕೊಂಡಿರುವ ಭೂಮಿಯನ್ನು ಸೆಕ್ಷನ್ 4ರ ವ್ಯಾಪ್ತಿಯಿಂದ ಕೈಬಿಡಬೇಕು, ಕೂಡಲೇ ಅಕ್ರಮ ಸಕ್ರಮ ಸಮಿತಿ ಸಭೆ ನಡೆಸಿ ಅರ್ಜಿ ಹಾಕಿದ ಎಲ್ಲರಿಗೂ ಹಕ್ಕುಪತ್ರ ಸೇರಿದಂತೆ ಅಗತ್ಯ ಭೂದಾಖಲೆ ನೀಡಲು ಕ್ರಮಕೈಗೊಳ್ಳಬೇಕು ಮತ್ತು ನೆನೆಗುದಿಗೆ ಬಿದ್ದಿರುವ ನಿವೇಶನ ಭೂಮಿಯನ್ನು ಅರ್ಹರಿಗೆ ಹಂಚಬೇಕು ಎಂಬ ಬೇಡಿಕೆಯ ಜೊತೆಗೆ ಒಟ್ಟು 14 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು
ಜನಶಕ್ತಿ ವೇದಿಕೆ ರಾಜ್ಯ ಗೌರವಾಧ್ಯಕ್ಷ ಗೌಸ್ ಮೊಹಿಯುದ್ದೀನ್ ಮಾತನಾಡಿ, ಸರ್ಕಾರ ಕೂಡಲೇ ಅರಣ್ಯ ಭೂಮಿ, ಸಾಗುವಳಿ ಭೂಮಿ ಯಾವುದು ಎಂದು ವರ್ಗೀಕರಿಸಬೇಕು ಎಂದು ಒತ್ತಾಯಿಸಿದರು. ನಗರ ವ್ಯಾಪ್ತಿಯಲ್ಲಿಯೂ ಸಹ ನಗರಸಭೆಯಿಂದ ಬಡವರಿಗೆ ನಿವೇಶನ ನೀಡುವ ಕೆಲಸ ಆಗುತ್ತಿಲ್ಲ, ಉಳ್ಳವರಿಗೆ ನಿವೇಶನವನ್ನು ಮಂಜೂರು ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಪತ್ರಿಕಾಗೋಷ್ಟಿಯಲ್ಲಿ ಮಹಮದ್ ಹತೀಕ್, ಹಸನಬ್ಬ, ಗಣೇಶ್ ಸೇರಿದಂತೆ ಹಲವರು ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g