ಅಡಿಯಾಳದ ರಸ್ತೆ, ಇದ್ದ ಬಸ್ಸು ನಿಲ್ತು, ಆತಂಕದಲ್ಲಿ ಮಲೆನಾಡಿಗರು
1 min readಚಿಕ್ಕಮಗಳೂರು. 32 ವರ್ಷದಿಂದ ಓಡಾಡುತ್ತಿದ್ದ ಸರ್ಕಾರಿ ಬಸ್ ರಸ್ತೆ ಸರಿ ಇಲ್ಲ ಅಂತ ಸ್ಥಗಿತಗೊಂಡಿದ್ದು ಮಲೆನಾಡಿಗರು ಬಸ್ ಇಲ್ಲದೆ ತೀವ್ರ ಸಂಕಷ್ಟಕ್ಕೀಡಾಗಿ ಖಾಸಗಿ ವಾಹನಗಳಿಗೆ ದುಬಾರಿ ಹಣ ನೀಡಿ ಓಡಾಡಬೇಕಾದ ದುಸ್ಥಿತಿ ಮಲೆನಾಡಲ್ಲಿ ನಿರ್ಮಾಣವಾಗಿದೆ. ಚಿಕ್ಕಮಗಳೂರು ತಾಲೂಕು ಹಾಗೂ ಮೂಡಿಗೆರೆ ವಿಧಾನಭಾ ಕ್ಷೇತ್ರದ ಹಾಂದಿ ಗ್ರಾಮದಿಂದ ವಾಟೇಗನಹಳ್ಳಿ ಮೂಲಕ ಹೋಗುವ ಬಸ್ಕಲ್ ರಸ್ತೆಯಲ್ಲಿ ಅಡಿಯಾಳದ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಂದಿಯಿಂದ ವಾಟೇಗನಹಳ್ಳಿ ಮೂಲಕ ಸಾಗುವ ಬಸ್ಕಲ್ ಗ್ರಾಮದವರೆಗೆ ಸುಮಾರು 9 ಕಿ.ಮೀ. ಕ್ರಮಿಸುವ ರಸ್ತೆಯಲ್ಲಿ ಸುಮಾರು 5 ಕಿ.ಮೀ.ನಷ್ಟು ರಸ್ತೆಯಲ್ಲಿ ದೊಡ್ಡ-ದೊಡ್ಡ ಹೊಂಡ-ಗುಂಡಿಗಳೇ ಇದ್ದು ರಸ್ತೆ ಸಂಪೂರ್ಣ ಹದಗೆಟ್ಟಿದೆ. ವಾಹನ ಸವಾರರು ಅಲ್ಲಲ್ಲಿ ಎದ್ದು-ಬಿದ್ದು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಳೆ ಸುರಿದಾಗ ಇದು ರಸ್ತೆಯೋ ಅಥವ ಹಳ್ಳವೋ ಎಂಬ ಅನುಮಾನ ಸ್ಥಳಿಯರನ್ನ ಕಾಡುತ್ತಿದೆ. ಈ ರಸ್ತೆಯನ್ನ 20ಕ್ಕೂ ಹೆಚ್ಚು ಗ್ರಾಮದ ಐದು ಸಾವಿರಕ್ಕೂ ಅಧಿಕ ಜನ ಅವಲಂಬಿಸಿದ್ದಾರೆ. ಅಗತ್ಯ ಕೆಲಸಕ್ಕಾಗಿ ತೆರಳುವ ಗ್ರಾಮಸ್ಥರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ. ಈ ಮಾರ್ಗ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಬೇಲೂರು, ಹಳೇಬೀಡು ಹಾಗೂ ಶೃಂಗೇರಿ ಮಾರ್ಗದ ಪ್ರವಾಸಿಗರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಹತ್ತಾರು ವರ್ಷಗಳಿಂದ ಈ ರಸ್ತೆಯನ್ನ ದುರಸ್ಥಿ ಮಾಡದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಳೆದ 30 ವರ್ಷಗಳಿಂದ ಚಿಕ್ಕಮಗಳೂರು-ಗೆಂಡೇಹಳ್ಳಿ ಮಾರ್ಗವಾಗಿ ಈ ಭಾಗದಲ್ಲಿ ಬಸ್ ಸಂಚಾರವಿತ್ತು. ಆದರೆ ಈಗ, ಎರಡು ವರ್ಷಗಳಿಂದ ಬಸ್ ಇಲ್ಲದೆ ವಿದ್ಯಾರ್ಥಿಗಳು, ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ. ಪ್ರಯಾಣಿಕರು ದುಪ್ಪಟ್ಟು ಹಣ ನೀಡಿ ಆಟೋ ಹಾಗೂ ಖಾಸಗಿ ಸಂಚರಿಸಬೇಕಿದೆ. ಈ ಗುಂಡಿ ರಸ್ತೆಯಲ್ಲಿ ಸಂಚರಿಸಲು ಖಾಸಗಿ ವಾಹನದ ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಈ ಮಾರ್ಗದಲ್ಲಿ ಓಡಾಡುವ ರೋಗಿಗಳು, ಗರ್ಭೀಣಿಯರ ಪಾಡು ಹೇಳತೀರದ್ದಾಗಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೂ ಮನವಿ ಸಲ್ಲಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳಿಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g