ಮತದಾನ ಕೇಂದ್ರದ ಬಳಿ ಎರಡು ಬಿಜೆಪಿ ಗುಂಪುಗಳ ನಡುವೆ ಮಾರಾಮಾರಿ
1 min read
ಲೋಕಸಭಾ ಚುನಾವಣೆ ಮತದಾನ ಶಾಂತಿಯುತ ಅಂತ್ಯ ಕಾಣುವ ಹೊತ್ತಲ್ಲೇ ಬಾಳೇಹೊನ್ನೂರಿನಲ್ಲಿ ಬಿಜೆಪಿ ಕಾರ್ಯಕರ್ತರೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಉಜಿನಿ ಮತದಾನ ಕೇಂದ್ರದ ಬಳಿ ಮಾಜಿ ಭಜರಂಗದಳ ಮುಖಂಡ ಖಾಂಡ್ಯ ಪ್ರವೀಣ್ ಮೇಲೆ ಸ್ಥಳೀಯ ಬಿಜೆಪಿ ಮುಖಂಡರೇ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಮಾಜಿ ಶಾಸಕ ಡಿ.ಎನ್ ಜೀವರಾಜ್ ಕುಮ್ಮಕ್ಕಿನಿಂದ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಬಾಳೆಹೊನ್ನೂರು ಬಿಜೆಪಿ ಆಂತರಿಕ ಕಲಹ ಮತ್ತೊಮ್ಮೆ ಬೀದಿ ಗಲಾಟೆ ಮೂಲಕ ಬಹಿರಂಗಗೊಂಡಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಮತದಾನದ ವೇಳೆ ಘರ್ಷಣೆ ನಡೆದಿರುವುದು ಒಳ ಬೇಗುದಿಯ ಹೊಡೆತ ಮತ್ತೆ ಬಿಜೆಪಿಗೆ ತಟ್ಟಿದೆ. ಮಾಜಿ ಭಜರಂಗದಳ ಮುಖಂಡ ಪ್ರವೀಣ್ ಖಾಂಡ್ಯ ಹಾಗೂ ಮಾಜಿ ಶಾಸಕ ಡಿ.ಎನ್ ಜೀವರಾಜ್ ನಡುವಿನ ಮುಸುಕಿನ ಗುದ್ದಾಟ ಇದೀಗ ಹೊಡೆದಾಟದ ಸ್ವರೂಪ ಪಡೆದುಕೊಂಡಿದೆ. ಮತದಾನ ನಡೆಯುತ್ತಿದ್ದ ಬಾಳೆಹೊನ್ನೂರಿನ ಮತಕೇಂದ್ರಗಳಿಗೆ ಭೇಟಿ ಕೊಡುತ್ತಿದ್ದ ಖಾಂಡ್ಯ ಪ್ರವೀಣ್ ಹಾಗೂ ಬೆಂಬಲಿಗರ ಮೇಲೆ ಜೀವರಾಜ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಿದರೆ ಪಂಚಾಯ್ತಿ ಸುತ್ತಮುತ್ತ ತೆರಳುತ್ತಿದ್ದ ವೇಳೆ ಪರಸ್ಪರ ಎರಡೂ ಬಣದ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಘಟನೆಯಲ್ಲಿ ಪ್ರವೀಣ್ ಖಾಂಡ್ಯ ತಲೆಗೆ ಪೆಟ್ಟುಬಿದ್ದು ಗಂಭೀರ ಗಾಯವಾಗಿ ರಕ್ತಸ್ತಾವವಾಗಿದೆ. ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿರುವ ಪ್ರವೀಣ್ ಮಾಜಿ ಶಾಸಕ ಜೀವರಾಜ್ ವಿರುದ್ದ ಹರಿ ಹಾಯ್ದಿದ್ದಾರೆ. ಬಾಳೆಹೊನ್ನೂರು ಬಿಜೆಪಿ ಮುಖಂಡ ವೆನಿಲ್ಲಾ ಬಾಸ್ಕರ್ ಸೇರಿದಂತೆ ಹಲವರು ಇದರ ಹಿಂದೆ ಇದ್ದಾರೆ ಎಂದು ಆರೋಪಿಸಿರುವ ಅವರು ಜೀವರಾಜ್ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಜೀವರಾಜ್ ಸೋಲಿಗೆ ಖಾಂಡ್ಯ ಪ್ರವೀಣ್ ಕಾರಣ ಎಂಬ ಜಿದ್ದಿಗೆ ಬಾಳೆಹೊನ್ನೂರು ಸ್ಥಳೀಯ ಬಿಜೆಪಿ ಮುಖಂಡರು ಈ ರೀತಿ ಮಾಡಿದ್ದಾರಂತೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g