ಸ್ಮಶಾನ ಭೂಮಿಗೆ ಒತ್ತಾಯ; ಸ್ಥಳೀಯರಿಂದ ಗ್ರಾಮ ಪಂಚಾಯಿತಿಗೆ ಮುತ್ತಿಗೆ
1 min readಚಿಕ್ಕಮಗಳೂರು : ನ್ಯಾಯಾಲಯ ತೀರ್ಪು ನೀಡಿದರು ಸ್ಮಶಾನಕ್ಕೆ ಜಾಗ ನೀಡದ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಗೋಪಾಲ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿರುವ ಸ್ಮಶಾನದ ಜಾಗವನ್ನ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿರೋ ಗ್ರಾಮಸ್ಥರು, ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದ್ದರು. ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದ ನ್ಯಾಯಾಲಯ ಗ್ರಾಮಸ್ಥರಿಗೆ ಸ್ಮಶಾನದ ಜಾಗವನ್ನು ನೀಡುವಂತೆ ಆದೇಶ ನೀಡಿತ್ತು. ನ್ಯಾಯಾಲಯ ಆದೇಶ ನೀಡಿದರೂ ಪಂಚಾಯಿತಿಯು ಸ್ಮಶಾನದ ಜಾಗವನ್ನ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಇಡೀ ಹಳ್ಳಿಯ ಜನ ಪಂಚಾಯಿತಿಗೆ ಮುತ್ತಿಗೆ ಹಾಕಿದ್ದಾರೆ. ಹಳ್ಳಿಗರು ಪಂಚಾಯಿತಿಗೆ ಮುತ್ತಿಗೆ ಹಾಕುವ ಹಿನ್ನೆಲೆ ಪಂಚಾಯಿತಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಆದರೆ, ಸ್ಥಳಿಯರು ಪೊಲೀಸರನ್ನೂ ಲೆಕ್ಕಿಸದೆ ಪಂಚಾಯಿತಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಂಚಾಯಿತಿಯು ಸ್ಮಶಾನಕ್ಕೆ ಜಾಗ ನೀಡುವವರೆಗೂ ಇಲ್ಲಿಂದ ಹೋಗುವುದಿಲ್ಲ ಎಂದು ಪಂಚಾಯಿತಿ ಮುಂದೆಯೇ ಧರಣಿ ಕೂತಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಆರ್.ಐ. ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿ 15 ದಿನದಲ್ಲಿ ಸ್ಮಶಾನದ ಜಾಗ ಬಿಡಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ, ಹಳ್ಳಿಗರು ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟಿದ್ದಾರೆ. 15 ದಿನದಲ್ಲಿ ಸ್ಮಶಾನದ ಜಾಗ ಬಿಡಿಸಿಕೊಡದಿದ್ದರೆ ಮತ್ತೆ ಪ್ರತಿಭಟನೆಗೆ ಮಂದಾಗಿ ಪಂಚಾಯಿತಿಗೆ ಬೀಗ ಹಾಕಿ, ಸ್ಮಶಾನದ ಜಾಗ ಬಿಡಿಸಿ ಕೊಡುವವರೆಗೂ ಬೀಗ ತೆಗೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g