ಪೌತಿ ಖಾತೆ ಸಮಸ್ಯೆ ಇತ್ಯಾರ್ಥ ಪಡಿಸುವ ನಿಟ್ಟಿನಲ್ಲಿ ಪೌತಿಖಾತೆ ಆಂದೋಲನಾ ಕಂದಾಯ ಸಚಿವ ಆರ್. ಅಶೋಕ್
1 min readಚಿಕ್ಕಮಗಳೂರು: ಪೌತಿ ಖಾತೆ ಸಮಸ್ಯೆಯಿಂದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಪೌತಿ ಖಾತೆ ಸಮಸ್ಯೆ ಇತ್ಯಾರ್ಥ ಪಡಿಸುವ ನಿಟ್ಟಿನಲ್ಲಿ ಪೌತಿಖಾತೆ ಆಂದೋಲನಾ ನಡೆಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಶನಿವಾರ ರಾತ್ರಿ ಗ್ರಾಮ ವಾಸ್ತವ್ಯ ಮಾಡಿ ಭಾನುವಾರ ಬೆಳಿಗ್ಗೆ ನಡೆದ ಪೌತಿ ಖಾತೆ ಆಂದೋಲನಾ ಮತ್ತು ಗ್ರಾಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರೈತರ ಕಲ್ಯಾಣಕ್ಕಾಗಿ ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ಆರು ಸಾವಿರ ಸಹಾಯಧನ, ರಾಜ್ಯ ಸರ್ಕಾರ ನಾಲ್ಕು ಸಾವಿರ ಸಹಾಯಧನ ಸೇರಿ ಹತ್ತು ಸಾವಿರ ರೂ. ರೈತರ ಖಾತೆಗಳಿಗೆ ಹಾಕುತ್ತಿದೆ ಎಂದರು.
ರೈತ ಕುಟುಂಬಗಳು ಪೌತಿಖಾತೆ ಸಮಸ್ಯೆಯಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದು, ಪೌತಿ ಖಾತೆ ಆಂದೋಲನದಲ್ಲಿ ಸರಿಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಕಡೂರು ತಾಲೂಕಿನಲ್ಲಿ 12 ಸಾವಿರ ಪೌತಿಖಾತೆಗಳನ್ನು ಮಾಡಿಸಲಾಗಿದೆ. ಗ್ರಾಮ ವಾಸ್ತವ್ಯದಲ್ಲಿ ಪೌತಿಖಾತೆ ಆಂದೋಲನಾ ಹಮ್ಮಿಕೊಂಡಿರುವ ಉದ್ದೇಶ ರೈತರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಕಾರಣದಿಂದ. ರಾಜ್ಯದಲ್ಲಿ ಪೌತಿ ಖಾತೆ ಸಮಸ್ಯೆ ನಿವಾರಣೆಯಾದಲ್ಲಿ ಕೇಂದ್ರ ಸರ್ಕಾರ ದಿಂದ ಹೆಚ್ಚಿನ ಅನುದಾನ ಬರಲಿದೆ. ಈ ನಿಟ್ಟಿನಲ್ಲಿ ಆಂದೋಲನಾದ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಹುಲಿಕೆರೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದು, ಗ್ರಾಮಕ್ಕೆ ಒಂದು ಕೋಟಿ ರೂ. ಅನುದಾನ ನೀಡಿದ್ದೇನೆ. ಗ್ರಾಮದ ರಸ್ತೆ, ದೇವಸ್ಥಾನ, ಶಾಲೆ, ನಿವೇಶನ ಹೀಗೆ ಯಾವ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಬೇಂದು ಗ್ರಾಮದ ಹಿರಿಯರೊಂದಿಗೆ ಚರ್ಚಿಸಿ ತೀರ್ಮಾನ ಮಾಡುವಂತೆ ಹೇಳಿದರು.
ಪರಿಶಿಷ್ಟ ಪಂಗಡ ಸಮುದಾಯ ಬಡಾವಣೆಯಲ್ಲಿರುವ ದೇವಸ್ಥಾನ ಅಭಿವೃದ್ಧಿಗೆ 5ಲಕ್ಷ ರೂ. ಮೀಸಲಿಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಗ್ರಾಮದ ಮುಖಂಡ ಶಿವಮೂರ್ತಿ ಮಾತನಾಡಿ, ಗ್ರಾಮದ ಅಭಿವೃದ್ಧಿ ಗೆ ಒಂದು ಕೋಟಿ ರೂ. ನೀಡಿರುವುದು ಸಂತೋಷ ತಂದಿದೆ. ಗ್ರಾಮದಲ್ಲಿ ಸರ್ಕಾರಿ ಕಚೇರಿ ಕಟ್ಟಡಗಳು ಇಲ್ಲದಿರುವುದರಿಂದ ಸರ್ಕಾರಿ ಕೆಲಸ ಕಾರ್ಯಗಳಿಗೆ ಅನಾನುಕೂಲವಾಗಿದೆ. ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಗ್ರಾಮದ ಪರಿಶಿಷ್ಟ ಪಂಗಡ ಬಡಾವಣೆ ಸರ್ಕಾರಿ ದಾಖಲೆಯಲ್ಲಿ ಗೋಕಟ್ಟೆ ಎಂದು ನಮೂದಾಗಿದ್ದು, ಸರ್ಕಾರಿ ಭೂಮಿ ಎಂದು ಮಾರ್ಪಡಿಸಿ ನಿವೇಶನ ಹಂಚಿ, ಈಸ್ವತ್ತು ನೀಡಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರೊಬ್ಬರು ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸುವಂತೆ ಮನವಿ ಮಾಡಿದರು.
ಉಮೇಶ್ ಎಂಬುವರು ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿ ಕ್ವಾಟ್ರಸ್ ಇಲ್ಲದಿರುವುದರಿಂದ ಅವರು ಇಲ್ಲಿ ವಾಸ್ತವ್ಯ ಹೂಡುತ್ತಿಲ್ಲ. ಸಣ್ಣಾಪುಟ್ಟ ಸರ್ಕಾರಿ ಕೆಲಸಕ್ಕೂ ಸಖರಾಯಪಟ್ಟಣವನ್ನೇ ಆಶ್ರಯಿಸಬೇಕಾಗಿದೆ ಎಂದರು.
ಈ ವೇಳೆ ಗ್ರಾಮಸ್ಥರಿಂದ ಅರ್ಜಿ ಸ್ವೀಕರಿಸಿ, ಅಹವಾಲು ಆಲಿಸಿದರು. ಕೆಲವೊಂದು ಅರ್ಜಿ ಗಳನ್ನು ಸ್ಥಳದಲ್ಲೇ ಇತ್ಯಾರ್ಥಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಸಿ.ಟಿ.ರವಿ, ಬೆಳ್ಳಿ ಪ್ರಕಾಶ್, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಕೆ.ಪಿ.ವೆಂಕಟೇಶ, ಜಿಲ್ಲಾಧಿಕಾರಿ ಕೆ.ಎನ್.ರಮೇಶ, ಜಿ.ಪಂ.ಸಿಇಓ ಜಿ.ಪ್ರಭು, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g