ವಿಧಾನ ಪರಿಷತ್ ಚುನಾವಣೆ ಫಲಿತಾಂಶ; ಕಾನೂನು ಹೋರಾಟ_ಡಾ.ಅಂಶುಮಂತ್
1 min read
ಚಿಕ್ಕಮಗಳೂರು: ವಿಧಾನಪರಿಷತ್ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಉತ್ತಮ ಪೈಪೋಟಿ ನೀಡಲಾಗಿದೆ. ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದು, ಗೆಲುವಿಗೆ ಸಂಘಟಿತ ಹೋರಾಟ ನಡೆಸಲಾಯಿತು ಎಂದು ತಿಳಿಸಿದರು.ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಪ್ರಾತಿನಿಧ್ಯ ಹೆಚ್ಚಳವಾಗಿತ್ತು. ೪ಶಾಸಕರು, ಸಂಸದರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳೂ ಇದ್ದರೂ ಹೆಚ್ಚಿನ ಮತಗಳ ಅಂತರದ ಗೆಲುವು ಸಾಧ್ಯವಾಗಲಿಲ್ಲ, ಆಡಳಿತ ಪಕ್ಷದವರು ವ್ಯವಸ್ಥೆಯನ್ನೆ ದುರ್ಬಳಕೆ ಮಾಡಿಕೊಂಡರೆಂದು ಆರೋಪಿಸಿದರು.
ಮತದಾನದ ದಿನ ಹುಲಿಗೆರೆ ಪಂಚಾಯಿತಿ ಮತಗಟ್ಟೆಯಲ್ಲಿ ಮಾದರಿ ಮತಪತ್ರ ಮತಪೆಟ್ಟಿಗೆಯಲ್ಲಿ ಕಾಣಿಸಿಕೊಂಡಿದೆ. ಕಡೂರು ತಾಲೂಕು ಉಳಿಗೆರೆಯಲ್ಲಿ ಅಸಲಿ ಮತಪತ್ರ ನಾಪತ್ತೆಯಾಗಿದೆ. ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲವೆಂದು ಸಂಶಯ ಮೂಡಿದೆ. ಮತದಾರರನ್ನು ಒಂದು ಕಡೆಹೂಡಿಹಾಕುವ ಮೂಲಕ ಮುಕ್ತ ಮತದಾನಕ್ಕೆ ಬಿಜೆಪಿಯವರು ಅವಕಾಶಮಾಡಿಕೊಟ್ಟಿಲ್ಲವೆಂದು ದೂರಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಯಾವುದೇ ಕ್ರಮ ಜರುಗಿಸಿಲ್ಲ, ಬಿಜೆಪಿ ದುರಾಳಿತದ ವಿರುದ್ಧ ಮತದಾರರು ಮತಚಲಾಯಿಸಿದ್ದಾರೆ. ಹೆಚ್ಚು ಮತಗಳು ಬಿದ್ದಿರುವುದು ಗಮನಿಸಿದರೆ ಜನರ ವಿಶ್ವಾಸಗಳಿಸಲು ಶ್ರಮವಹಿಸಲಾಗುವುದು ಎಂದರು.ನಗರಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ದುಡಿದವರನ್ನು ಗುರುತಿಸಿ ಟಿಕೆಟ್ ನೀಡಲಾಗಿದೆ. ನಾಮಪತ್ರ ಸಲ್ಲಿಕೆ ಕೊನೆದಿನವಾದ ಬುಧವಾರ ಕಾಂಗ್ರೆಸ್ ಅಭ್ಯರ್ಥಿಗಳು ಉತ್ಸಾಹದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದು, ಎಲ್ಲರ ಮನವೊಲಿಸಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ.ನಗರಸಭೆಯಲ್ಲಿ ಭ್ರಷ್ಟವ್ಯವಸ್ಥೆಯನ್ನು ಆಡಳಿತ ನಡೆಸಿದವರು ಸೃಷ್ಟಿಸಿದ್ದಾರೆ.ನಗರದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ ಇವೆಲ್ಲವನ್ನು ಗಮನಿಸಿರುವ ನಗರದ ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಕೈಹಿಡಿಯುತ್ತಿದ್ದು, ನಗರಸಭೆ ಆಡಳಿತ ಚುಕ್ಕಾಣಿಯನ್ನು ಕಾಂಗ್ರೆಸ್ ಹಿಡಿಯಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g