ಚುನಾವಣಾ ಆಯೋಗದಿಂದ ಮಕ್ಕಳ ಮೂಲಭೂತ ಹಕ್ಕಿನ ಹರಣ : ಎಸ್.ಡಿ.ಎಂ.ಸಿ ಅಧ್ಯಕ್ಷರು
1 min readಚಿಕ್ಕಮಗಳೂರು : ಸರ್ಕಾರಿ ಶಾಲೆಯಲ್ಲಿರುವ ಶಿಕ್ಷಕರನ್ನು ಒತ್ತಾಯಪೂರ್ವಕವಾಗಿ ಚುನಾವಣಾ ಕೆಲಸಗಳಿಗೆ ಮತಗಟ್ಟೆಯ ಅಧಿಕಾರಿಗಳನ್ನಾಗಿ ನೇಮಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಉನ್ನತೀಕರಿಸಿದ ಶಾಸಕರ ಮಾದರಿ ಸರ್ಕಾರಿ ಪ್ರಾಥಮಿಕ ಬಾಲಕಿಯರ ಪಾಠಶಾಲೆ ಬಸವನಹಳ್ಳಿ ಶಾಲೆಯ ಪೋಷಕರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣ ಸಮಿತಿಯ ಸದಸ್ಯರು ಶಾಲೆಯಲ್ಲಿ ಶಿಕ್ಷಕರನ್ನು ತಡೆದು ಶಾಲೆಗೆ ಬೇಗ ಹಾಕಿ ಶಾಲೆಯ ಮುಂದೆ ಪ್ರತಿಭಟನೆಯನ್ನು ನಡೆಸಿದರು.
ಶಿಕ್ಷಕರನ್ನು ಮತಗಟ್ಟೆ ಅಧಿಕಾರಿಗಳನ್ನಾಗಿ ನೇಮಿಸುತ್ತಿರುವುದರಿಂದ ತಮಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಕೂಡಲೇ ಶಿಕ್ಷಕರನ್ನು ಮತಗಟ್ಟೆ ಅಧಿಕಾರಿಗಳ ಜವಾಬ್ದಾರಿಯಿಂದ ವಿಮುಕ್ತ ಗೊಳಿಸಬೇಕೆಂದು ಒತ್ತಾಯಿಸಿ ಅಧಿಕಾರಿಗಳ ವಿರುದ್ಧ ಶಾಲಾ ಮಕ್ಕಳು ಘೋಷಣೆ ಕೂಗಿದರು.
ಮಕ್ಕಳ ಪ್ರತಿಭಟನೆಯಲ್ಲಿ ಮಾತನಾಡಿದ ಉನ್ನತೀಕರಿಸಿದ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬಸವನಹಳ್ಳಿಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ್ ರವರು ಮಾತನಾಡುತ್ತಾ ಸರ್ಕಾರವು ಒಂದೆಡೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಆದೇಶಿಸುತ್ತದೆ, ಮತ್ತೊಂದೆಡೆ ಒಂದು ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಬೇಕಾದ ಸೌಲಭ್ಯಗಳನ್ನು ನೀಡದೇ ವಂಚಿಸುತ್ತಿದೆ. ಈಗಾಗಲೇ ಬಹಳಷ್ಟು ಸರ್ಕಾರಿ ಶಾಲೆಗಳು ಶಾಲಾ ಮಕ್ಕಳಿಲ್ಲದೆ ಮುಚ್ಚುವ ಹಂತ ತಲುಪಿದ್ದು, ಕೆಲವು ಶಾಲೆಗಳು ಮುಚ್ಚಿವೆ. ಸರ್ಕಾರವು ಪಠ್ಯಕ್ಕೆ ಅನುಗುಣವಾಗಿ ಶಿಕ್ಷಕರ ನೇಮಸದೆ ಕೇವಲ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸುತ್ತ ವಾಸ್ತವವಾಗಿ ಮಕ್ಕಳನ್ನು ಶೈಕ್ಷಣಿಕವಾಗಿ ಹಿಂದುಳಿಯುವಂತೆ ಮಾಡುತ್ತಿದೆ. ಈಗ ಚುನಾವಣಾ ಇಲಾಖೆಯು ಇರುವ ಕೆಲವೇ ಶಿಕ್ಷಕರಲ್ಲಿ ಮತಗಟ್ಟೆ ಅಧಿಕಾರಿಗಳನ್ನಾಗಿ ಜವಾಬ್ದಾರಿಯನ್ನು ನೀಡಿ ಒತ್ತಾಯಪೂರ್ವಕವಾಗಿ ಕೆಲಸ ಮಾಡುತ್ತದೆ. ಇದರಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಕುಂಠಿತಗೊಳ್ಳುತ್ತಿದ್ದು, ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದರಿಂದ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗುತ್ತಿದ್ದು, ಸಂವಿಧಾನವು ನೀಡಿರುವ ಮಕ್ಕಳ ಶಿಕ್ಷಣ ಸ್ವಾತಂತ್ರ್ಯದ ಹರಣವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತಗಟ್ಟೆ ಅಧಿಕಾರಿಗಳ ಕೆಲಸಕ್ಕೆ ನಮ್ಮ ಶಾಲೆಯಲ್ಲಿ ನೇಮಿಸಿಕೊಂಡಿರುವ ಶಿಕ್ಷಕರನ್ನು ಕೈಬಿಡಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ನಂತರ ಮಾತನಾಡಿದ ಎಸ್ಡಿಎಂಸಿ ಸದಸ್ಯರಾದ ನಾಗರಾಜ ಶರ್ಮ ರವರು ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಬಲವಂತದಿಂದ ಮತದಾರರ ಮಾಹಿತಿ ಸಂಗ್ರಹಿಸುವ ಕೆಲಸವನ್ನು ಚುನಾವಣಾ ಇಲಾಖೆಯು ಮಾಡುತ್ತಿದ್ದು ಇದರಿಂದ ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಪಠ್ಯ ವಿಷಯಗಳನ್ನು ಬೋಧನೆ ಮಾಡಲಾಗದೆ ಶೈಕ್ಷಣಿಕ ಕೊರತೆ ಉಂಟಾಗುತ್ತಿದೆ. ಈ ಕೆಲಸವು ನಗರದ ಅನೇಕ ಶಾಲೆಗಳಲ್ಲಿ ನಡೆಯುತ್ತಿದೆ. ನಗರದ ಬಹಳಷ್ಟು ಶಾಲೆಗಳಲ್ಲಿ ನಾಕೈದು ಜನ ಶಿಕ್ಷಕರಿದ್ದು ಅವರಲ್ಲಿ ನಾಲ್ಕು ಜನ ಶಿಕ್ಷಕರನ್ನು ಬಿ ಎಲ್ ಓ ಗಳಾಗಿ ನೇಮಿಸುತ್ತಿದ್ದಾರೆ. ಶಾಲೆಯಲ್ಲಿರುವ ಒಬ್ಬರು ಶಿಕ್ಷಕರಿದ್ದು ಅವರಿಗೆ ಅನಾರೋಗ್ಯದ ಸಮಸ್ಯೆ ಇದೆ. ನಮ್ಮ ಶಾಲೆಯಲ್ಲಿ 225 ವಿದ್ಯಾರ್ಥಿನಿಯರುಗಳಿದ್ದು ಶಾಲೆಯಲ್ಲಿ ಐದು ಜನ ಶಿಕ್ಷಕರು 5 ಗಂಟೆ ಪಾಠ ಮಾಡಿದರೆ ಉಳಿದ ಎಷ್ಟು ಮಕ್ಕಳಿಗೆ ಹಾನಿಯಾಗುತ್ತದೆ. ಇದರ ಬಗ್ಗೆ ಅಧಿಕಾರಿಗಳು ಗಮನಹರಿಸುವುದಿಲ್ಲ. ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಸೇರಿಸಿ ಬಡ ಮಕ್ಕಳು ಓದುತ್ತಿರುವ ಸರ್ಕಾರಿ ಶಾಲೆಗಳಾಗಿ ಈ ರೀತಿ ಅನ್ಯಾಯ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶಿಕ್ಷಕರನ್ನು ಪಾಠ ಪ್ರವಚನಗಳಲ್ಲಿ ತೊಡಗಿಸಿಕೊಳ್ಳಲು ಬಿಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಈ ವೇಳೆ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯರುಗಳಾದ ರೇಷ್ಮಾ, ಕರುಣಾಕರ, ಇಂಪಾ, ಪವಿತ್ರ, ಹನುಮಂತ ನಾಯಕ, ಕುಸುಮ, ನೇಹಾ, ಕುಮುದಾ, ಸೇರಿದಂತೆ ಪೋಷಕರುಗಳಾದ ರವಿ, ಬಾಬು, ಶ್ರೀ ಲಕ್ಷ್ಮಿ, ರಶ್ಮಿ ಮುಂತಾದವರು ಭಾಗವಹಿಸಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g