ತಮ್ಮ ಹಳ್ಳಿಗೆ ತಾವೇ ಕಾಲುಸಂಕ ನಿರ್ಮಿಸಿಕೊಂಡು ಸರ್ಕಾರಕ್ಕೆ ಸೆಡ್ಡು ಹೊಡೆದ ಮಲೆನಾಡಿಗರು
1 min read
ಚಿಕ್ಕಮಗಳೂರು. ಸರ್ಕಾರ, ಅಧಿಕಾರಿಗಳು, ಜನಪ್ರತಿನಿಗಳ ಬೇಜಾವಬ್ದಾರಿ ನಡೆಗೆ ಮನನೊಂದು ಹಳ್ಳಿಗರು ತಮ್ಮ ಊರಿಗೆ ತುಂಗಾ ನದಿಗೆ ತಾವೇ ಕಾಲು ನಿರ್ಮಿಸಿಕೊಂಡು ಸರ್ಕಾರಕ್ಕೆ ಸವಾಲ್ ಹಾಕಿರುವ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಹರೇಬಿಳಲು ಗ್ರಾಮದಲ್ಲಿ ನಡೆದಿದೆ. ಹರೇಬಿಳಲು ಗ್ರಾಮ ತುಂಗಾ ನದಿಯಿಂದ ಆಚೆ ಇರುವ ಗ್ರಾಮ. ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ. ಇವರು ಮಕ್ಕಳು ಶಾಲೆಗೆ ಹೋಗಲು, ದೊಡ್ಡವರು ಕೂಲಿಗೆ ಹೋಗಲು ಪ್ರತಿಯೊಂದಕ್ಕೂ ಇದೇ ನದಿಯನ್ನೇ ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ಇವರು ಮೂರ್ನಾಲ್ಕು ತಿಂಗಳ ನಗರ ಪ್ರದೇಶದ ಸಂಪರ್ಕವನ್ನೇ ಕಳೆದುಕೊಳ್ಳುತ್ತಾರೆ. ನಗರ ಪ್ರದೇಶಕ್ಕೆ ಮಾರ್ಗವಿದ್ದರೂ ಸುಮಾರು 14 ಕಿ.ಮೀ. ಸುತ್ತಿಕೊಂಡು ಬರಬೇಕು. ಹಾಗಾಗಿ, ಇಲ್ಲಿನ ಜನ ಕಳೆದ ಹತ್ತಾರು ವರ್ಷಗಳಿಂದ ಸರ್ಕಾರ-ಅಧಿಕಾರಿಗಳಿಗೆ ಮನವಿ ಮಾಡುತ್ತಲೇ ಇದ್ದಾರೆ. ಆದರೆ, ಇವರ ಕಷ್ಟ-ನೋವಿಗೆ ಯಾರೂ ಸ್ಪಂದಿಸಿಲ್ಲ. ಹಾಗಾಗಿ, ಹಳ್ಳಿಗರೇ ತುಂಗಾ ನದಿಗೆ ಇಳಿದು ತಿಂಗಳುಗಟ್ಟಲೇ ಕೆಲಸ ಮಾಡಿ ಕಾಲುಸಂಕವನ್ನ ನಿರ್ಮಿಸಿಕೊಂಡಿದ್ದಾರೆ. ಇವರು ಸರ್ಕಾರದ ದಾರಿ ಕಾಯುತ್ತಿದ್ದರೆ. ಬಹುಶಃ ಇವರ ಮೊಮ್ಮಕ್ಕಳ ಕಾಲಕ್ಕೂ ಆಗುತ್ತಿತ್ತೋ ಇಲ್ವೋ ಗೊತ್ತಿಲ್ಲ. ಯಾಕಂದ್ರೆ, ಜಿಲ್ಲೆಯಲ್ಲಿ ಹತ್ತಾರು ಹಳ್ಳಿಯ ಜನ ಸರ್ಕಾರದ ದಾರಿ ಕಾದು-ಕಾದು ಕಾಯುತ್ತಲೇ ಇದ್ದಾರೆ. ಇಂದಿಗೂ ಸೇತುವೆ ನಿರ್ಮಾಣವಾಗಿಲ್ಲ. ಕಾಲಸಂಕವನ್ನೇ ಆಶ್ರಯಿಸಿದ್ದಾರೆ. ಬೇಸಿಗೆಯಲ್ಲೇ ತುಂಗಾ ನದಿ ನೀರು ಎದೆ ಮಟ್ಟಕ್ಕೆ ಬರುತ್ತೆ. ಮಳೆಗಾಲದಲ್ಲಿ ಇನ್ನೇನು ಕೇಳೋದೇ ಬೇಡ. ಬೇಸಿಗೆಯಲ್ಲೇ ತುಂಗಾ ನದಿ ದಾಟಬೇಕಂದ್ರೆ ಜೀವವನ್ನ ಪಣಕ್ಕಿಟ್ಟು ದಾಟಬೇಕು.
ಅದರಲ್ಲೂ ಕಳೆದ ನಾಲ್ಕೈದು ವರ್ಷಗಳಿಂದ ಮಲೆನಾಡಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಮಲೆನಾಡ ನದಿ-ಹಳ್ಳ-ಕೊಳ್ಳದ ಸುತ್ತಮುತ್ತಲಿನ ಜನ ಹೈರಾಣಾಗಿದ್ದಾರೆ. ಹಾಗಾಗಿ, ಸರ್ಕಾರದ ದಾರಿ ಕಾದು ಹಳ್ಳಿಗರೇ ತಿಂಗಳುಗಟ್ಟಲೇ ನದಿಯಲ್ಲೇ ಕೆಲಸ ಮಾಡಿ ತಮ್ಮೂರಿಗೆ ತಾವೇ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ. ಸದ್ಯಕ್ಕೆ ಕಾಲುಸಂಕ ನಿರ್ಮಿಸಿಕೊಂಡಿರುವುದರಿಂದ ಹರೇಬಿಳಲು-ನೆಮ್ಮಾರು ಗ್ರಾಮಕ್ಕೆ ಸಂಪರ್ಕ ಸಿಕ್ಕಿದಂತಾಗಿದೆ. ಜನ ನೆಮ್ಮಾರು ಮೂಲಕ ಶೃಂಗೇರಿ ಪಟ್ಟಣಕ್ಕೆ ಬರಲು ಸುಲಭವಾದಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಮನೆಬಾಗಿಲಿಗೆ ಬರುವ ಜನಪ್ರತಿನಿಧಿಗಳು ಮತ್ತೆ ಬರೋದು ಮುಂದಿನ ಚುನಾವಣೆಗೆ ಎಂದು ಜನಪ್ರತಿನಿಧಿಗಳ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಹಾಗಾಗಿ, ಹತ್ತಾರು ವರ್ಷಗಳಿಂದ ಸರ್ಕಾರ ಹಾಗೂ ಅಧಿಕಾರಿಗಳ ಬೇಜಾವಬ್ದಾರಿಯಿಂದ ನೊಂದ ಹಳ್ಳಿಗರು ತಾವೇ ಕಾಲುಸಂಕ ನಿರ್ಮಿಸಿಕೊಂಡು ಸರ್ಕಾರ-ಅಧಿಕಾರಿಗಳ ಜೀವಂತಿಕೆ ಬಗ್ಗೆ ಅನುಮಾನ ಮೂಡುವಂತೆ ಮಾಡಿದ್ದಾರೆ. ಆದರೆ, ಈ ಸಂಕ ತಾತ್ಕಾಲಿಕ ಬಳಕೆಗೆ ಮಾತ್ರ. ಯಾಕಂದ್ರೆ, ಮತ್ತೆ ಮಳೆಗಾಲ ಶುರುವಾಗುವ ಹೊತ್ತಿಗೆ ತುಂಗಾ ನದಿಯ ಅಬ್ಬರಕ್ಕೆ ಈ ಸಂಕ ಕೊಚ್ಚಿ ಹೋಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆಗ ಈ ಜನರ ಪಾಡೋ ದೇವರೇ ಬಲ್ಲ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g