ಪ್ರಧಾನಿ ನರೇಂದ್ರ ಮೋದಿ ಓರ್ವ ವ್ಯಕ್ತಿಯಲ್ಲ, ದೇಶದ ಶಕ್ತಿ, ಮೋದಿಯನ್ನ ಹಾಡಿ ಹೊಗಳಿದ ಬಾಳೆಹೊನ್ನೂರು ರಂಭಾಪುರಿ ಶ್ರೀ
1 min readದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಓರ್ವ ವ್ಯಕ್ತಿಯಲ್ಲ ಅವರೊಂದು ಶಕ್ತಿ ಎಂದು ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮಠದ ರಂಭಾಪುರಿ ಶ್ರೀಗಳು ಪ್ರಧಾನಿ ನರೇಂದ್ರ ಮೋದಿಯನ್ನ ಹಾಡಿ ಹೊಗಳಿದ್ದಾರೆ. ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆ ಮೋದಿಗೆ ಶುಭಹಾರೈಸಿದ ಜಗದ್ಗುರುಗಳು, ನರೇಂದ್ರ ಮೋದಿಯವರು ಒಬ್ಬ ವ್ಯಕ್ತಿಯಲ್ಲ. ಒಂದು ಮಹಾನ್ ಶಕ್ತಿ ಎಂದಿದ್ದಾರೆ. ದೇಶವನ್ನು ಸುಭದ್ರವಾಗಿ, ಸಮೃದ್ಧವಾಗಿ ಕಟ್ಟಬೇಕೆಂಬ ಅವರ ಅಭಿಲಾಷೆಯನ್ನ ಮರೆಯುವಂತಿಲ್ಲ. ದೇಶದ ಜನರ ಆರ್ಥಿಕ ಸ್ಥಿತಿಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವ ಜೊತೆಗೆ ಬಡತನವನ್ನ ಸಂಪೂರ್ಣವಾಗಿ ನಿರ್ಣಾಮ ಮಾಡಬೇಕೆಂಬ ಅವರ ಮಹತ್ವಾಕಾಂಕ್ಷೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಯಾರ ಹೊಗಳಿಕೆಗೂ ಹಿಗ್ಗದೆ, ಯಾರ ತೆಗಳಿಕೆಗೂ ಕುಗ್ಗದೆ ಅವರ ದೃಷ್ಟಿಯಲ್ಲಿ ಇರುವಂತಹ ಒಳ್ಳೆಯ ಕೆಲಸ ಕಾರ್ಯಗಳನ್ನ ಅತ್ಯಂತ ಪ್ರಾಮಾಣಿಕವಾಗಿ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ. ನಾಡಿಗೆ ಅನ್ನವನ್ನ ನೀಡುವಂತಹ ರೈತರ ಬಾಳು ಉಜ್ವಲವಾಗಬೇಕು ಎಂಬಂತಹ ಉದ್ದೇಶದಿಂದ ಕೃಷಿ ಕ್ಷೇತ್ರದಲ್ಲಿ ಹಲವಾರು ಮಹತ್ತರ ಬದಲಾವಣೆಗಳನ್ನು ತರುವಂತಹ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡ ಒಂದು ವಿಶಿಷ್ಟವಾದ ರೀತಿಯಲ್ಲಿ ಭಾರತೀಯ ಸಂಸ್ಕೃತಿ, ಆದರ್ಶಗಳು ಉಳಿದು ಬೆಳೆದು ಬರಲಿಕ್ಕೆ ಅವರು ಕೈಗೊಂಡ ನಿರ್ಣಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಾಡಿನಲ್ಲಿ ಎಲ್ಲ ವರ್ಗದ ಜನರು ಪ್ರೀತಿ-ಪ್ರೇಮ-ವಿಶ್ವಾಸ-ಸಾಮರಸ್ಯದಿಂದ ಬಾಳಿ ಸದೃಢವಾದ ಭಾರತವನ್ನು ಕಟ್ಟುವಂತಹಾ ಅವರ ಅಭಿಲಾಷೆಗೆ ನಾವೆಲ್ಲರೂ ಬದ್ಧರಾಗಿ ಕೈಜೋಡಿಸಿ ಅವರ ಬಲವನ್ನು ಬೆಳೆಸಬೇಕು ಎಂದು ನಾಡಿಗೆ ಜನರಲ್ಲಿ ಮನವಿ ಮಾಡಿದ್ದಾರೆ. ಮುಂದೊಂದು ದಿನ ಜನ್ಮ ಅಮೃತ ಮಹೋತ್ಸವ ಹಾಗೂ ಜನ್ಮ ಶತಮಾನೋತ್ಸವ ಆಚರಿಸಿಕೊಳ್ಳುವ ಸೌಭಾಗ್ಯ ಅವರದಾಗಲಿ ಎಂದು ಶುಭ ಹಾರೈಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g